UK Express Logo

ಉತ್ತರ ಕನ್ನಡಕ್ಕೆ ಬೇಕು ಟೆಕ್ ಪಾರ್ಕ್: ಬೆಳಗಾವಿಯಲ್ಲಿ ಸಚಿವ ಎಂ.ಬಿ. ಪಾಟೀಲ್ ಭೇಟಿಯಾದ ನಿಯೋಗ

By UKExpress on 12/10/2025
Featured Image ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಕಾಲನಿಯನ್ನು ‘ವಿಶೇಷ ಆರ್ಥಿಕ ವಲಯ’ (SEZ) ಅಥವಾ ‘ವಿಶೇಷ ಕೈಗಾರಿಕಾ ಪ್ರದೇಶ’ ಎಂದು ಘೋಷಿಸುವಂತೆ ಒತ್ತಾಯಿಸಿ, ಮಾಜಿ ಶಾಸಕ ವಿ.ಎಸ್. ಪಾಟೀಲ ಮತ್ತು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಶಿರಸಿ ನೇತೃತ್ವದ ನಿಯೋಗವು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಮನವಿ ಸಲ್ಲಿಸಿತು.

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸಚಿವರನ್ನು ಭೇಟಿಯಾದ ನಿಯೋಗ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮತ್ತು ಯುವಜನರ ವಲಸೆ ತಡೆಯಲು ಟೆಕ್ ಪಾರ್ಕ್ ನಿರ್ಮಾಣದ ಅಗತ್ಯತೆಯನ್ನು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿತು.

ಯೋಜನೆಯ ಮಹತ್ವ ಮತ್ತು ಲಭ್ಯತೆ: ಯಲ್ಲಾಪುರ ತಾಲೂಕಿನ ಮಾಗೋಡಿನಲ್ಲಿ ಸುಮಾರು 300 ಎಕರೆಗೂ ಅಧಿಕ ಭೂಮಿ ಲಭ್ಯವಿದ್ದು, ಇದು ಮೂಲತಃ ಬೇಡ್ತಿ ಯೋಜನೆಗಾಗಿ ಕೆ.ಪಿ.ಸಿ. ಕಾಲನಿ ನಿರ್ಮಾಣಕ್ಕೆ ಮೀಸಲಾಗಿತ್ತು. ಪ್ರಸ್ತುತ ಈ ಜಾಗದಲ್ಲಿ ನಿರ್ಮಿಸಿದ್ದ ಮನೆಗಳು ಹಾಳಾಗಿದ್ದು, ಪ್ರದೇಶವು ನಿರ್ಜನವಾಗಿದೆ. ಈ ಭೂಮಿಯನ್ನು ಅರಣ್ಯ ಇಲಾಖೆಯಿಂದ ಮರಳಿ ಪಡೆದು, ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (KIADB) ಮೂಲಕ ಟೆಕ್ ಪಾರ್ಕ್ ಅಥವಾ ಇಂಡಸ್ಟ್ರಿಯಲ್ ಪಾರ್ಕ್ ನಿರ್ಮಿಸಿದರೆ, ಸ್ಥಳೀಯ ಪ್ರತಿಭಾವಂತ ಯುವಕರು ಉದ್ಯೋಗ ಅರಸಿ ಬೇರೆಡೆಗೆ ವಲಸೆ ಹೋಗುವುದನ್ನು ತಪ್ಪಿಸಬಹುದು ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಸಂಪರ್ಕ ಮತ್ತು ಪರಿಸರ ಪೂರಕ ವಾತಾವರಣ: ಮಾಗೋಡು ಕಾಲನಿಯು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕೇವಲ 75 ಕಿ.ಮೀ ದೂರದಲ್ಲಿದೆ. ಅಲ್ಲದೆ, ಉದ್ದೇಶಿತ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಹಾಗೂ ಅಂಕೋಲಾ-ಗುತ್ತಿ ರಾಷ್ಟ್ರೀಯ ಹೆದ್ದಾರಿ-53 ಇದರ ಸಮೀಪದಲ್ಲೇ ಇದೆ. ಊಟಿ ಮತ್ತು ಕೊಡೈಕೆನಾಲ್ ಮಾದರಿಯ ಆಹ್ಲಾದಕರ ಹವಾಮಾನ, ಸಮೃದ್ಧ ನೀರು ಹಾಗೂ ಸಾಂಸ್ಕೃತಿಕ ಪರಿಸರ ಇಲ್ಲಿರುವುದರಿ೦ದ, ಮಾಗೋಡು ಪ್ರದೇಶವು ಐಟಿ-ಬಿಟಿ ಮತ್ತು ಸಾಫ್ಟ್‌ವೇರ್ ಪಾರ್ಕ್‌ಗಳಿಗೆ ಅತ್ಯಂತ ಸೂಕ್ತವಾಗಿದೆ.

ಜಿಲ್ಲೆಯ ಅಭಿವೃದ್ಧಿಗೆ ಆಗ್ರಹ: ಉತ್ತರ ಕನ್ನಡ ಜಿಲ್ಲೆಯು ಅಡಿಕೆ, ಸಾಂಬಾರ ಪದಾರ್ಥಗಳು ಮತ್ತು ವಿದ್ಯುತ್ ಯೋಜನೆಗಳ ಮೂಲಕ ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ನೀಡುತ್ತಿದೆ. ಆದರೆ, ಇದಕ್ಕೆ ಪ್ರತಿಯಾಗಿ ಜಿಲ್ಲೆಗೆ ಉತ್ತಮ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಾಗಲಿ ಅಥವಾ ಉನ್ನತ ಶಿಕ್ಷಣ ಸಂಸ್ಥೆಗಳಾಗಲಿ ಲಭ್ಯವಾಗಿಲ್ಲ. ಹೀಗಾಗಿ, ಇದೇ ಅಧಿವೇಶನದಲ್ಲಿ ಮಾಗೋಡನ್ನು ವಿಶೇಷ ಆರ್ಥಿಕ ವಲಯವೆಂದು ಘೋಷಿಸಿ, ಮುಂಬರುವ ಅಂತರರಾಷ್ಟ್ರೀಯ ಟೆಕ್ ಸಮ್ಮಿಟ್‌ನಲ್ಲಿ ಈ ಭಾಗದಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ನಿಯೋಗ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಪ್ರಮುಖರಾದ ಗಣೇಶ್ ಹೆಗಡೆ, ರಮೇಶ ನಾಯ್ಕ್ ಕುಪ್ಪಳ್ಳಿ, ಶ್ರೀಪತಿ ಮುದ್ದೆಪಾಲ್, ರಾಘವೇಂದ್ರ ನಾಯ್ಕ್, ಅಂಕಿತ್ ಹೆಗಡೆ, ರಾಮಕೃಷ್ಣ ಗಾಂವ್ಕರ್, ನಾರಾಯಣ ಖಂಡೇಕರ್ ಹಾಗೂ ಕೆ.ಟಿ. ಹೆಗಡೆ ಉಪಸ್ಥಿತರಿದ್ದರು.